ಖ್ಯಾತ ರಂಗಕರ್ಮಿ, ಕವಯಿತ್ರಿ ಎಸ್. ಮಾಲತಿ ಇನ್ನಿಲ್ಲ
ಕನ್ನಡದ ಹೆಸರಾಂತ ರಂಗಕರ್ಮಿ, ಕವಿ ಮತ್ತು ಹೋರಾಟಗಾರ್ತಿ ಎಸ್. ಮಾಲತಿ ನಿಧನರಾಗಿದ್ದಾರೆ.
ಎಡ ಚಳವಳಿಗಳಲ್ಲಿ ಸಕ್ರಿಯರಾಗಿದ್ದ ಎಸ್. ಮಾಲತಿ ಸಮುದಾಯದಲ್ಲೂ ಅನೇಕ ವರ್ಷಗಳ ಕಾಲ ಕಲಾ ಸೇವೆ ಸಲ್ಲಿಸಿದ್ದರು.
ಸಾಗರ: ಕನ್ನಡದ ಹೆಸರಾಂತ ರಂಗಕರ್ಮಿ, ಕವಿ ಮತ್ತು ಹೋರಾಟಗಾರ್ತಿ ಎಸ್. ಮಾಲತಿ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾಗಿದ್ದ ಎಸ್. ಮಾಲತಿ ಕೆರೆಗೆ ಹಾರ, ಯಯಾತಿ, ಹಯವದನ, ಭೀಮ ಕಥಾನಕ, ಹ್ಯಾಮ್ಲೆಟ್ ಸೇರಿದಮ್ತೆ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅನೇಕ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಎಸ್. ಮಾಲತಿ ಅವರ ಅನೇಕ ಕವನ ಸಂಕಲಗಳು ಪ್ರಕಟಗೊಂಡಿದ್ದು ಕ್ಷಣಿಕವಲ್ಲದ ಕ್ಷಣಗಳು ಎಂಬ ಕವನ ಸಂಕಲನಕ್ಕೆ ಮುಂಬಯಿ ಕನ್ನಡ ಸಂಘದ ಪೇಜಾವರ ಸದಾಶಿವ ರಾವ್ ಪ್ರಶಸ್ತಿ ಲಭಿಸಿತ್ತು. ನಾಡಿನ ಹಲವಾರು ಪತ್ರಿಕೆಗಳಲಿ ಅವರ ಕವನಗಳು ಪ್ರಕಟಗೊಂಡಿವೆ.
ಎಡ ಚಳವಳಿಗಳಲ್ಲಿ ಸಕ್ರಿಯರಾಗಿದ್ದ ಎಸ್. ಮಾಲತಿ ಸಮುದಾಯದಲ್ಲೂ ಅನೇಕ ವರ್ಷಗಳ ಕಾಲ ಕಲಾ ಸೇವೆ ಸಲ್ಲಿಸಿದ್ದರು. ಕಾರ್ಮಿಕ ಸಂಘಟನೆಗಳಲ್ಲೂ ದುಡಿದಿದ್ದ ,ಆಲತಿ ಅವರು ರಾಜ್ಯದ ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಪ್ರಸ್ತುತ ವಾಸವಿದ್ದ ಎಸ್. ಮಾಲತಿ ಪತಿ ಪುರುಷೋತ್ತಮ ತಲವಾಟ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಎಸ್. ಮಾಲತಿ ಅವರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದು ಸಾಗರ ತಾಲೂಕು ಐದನೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.