ಕನ್ನಡ ಸಾಹಿತ್ಯವನ್ನು ಆಕರ್ಷಕವಾಗಿ ಜನರಿಗೆ ತಲುಪಿಸಬೇಕಿದೆ: ಟಿ. ಎನ್. ಸೀತಾರಾಂ
ಲಂಕೇಶ್ ಅವರ ನಾಟಕ ಗದ್ಯ, ರವಿ ಬೆಳಗೆರೆ ಅವರ ಕನ್ನಡ ಸಾಹಿತ್ಯ, ಶಿವರಾಮ ಕಾರಂತರ ವಸ್ತು ವಿಷಯ, ಗಿರೀಶ ಕಾರ್ನಾಡರ ನಾಟಕದಂತೆ ಕನ್ನಡಿಗರಿಗೆ ಸಾಹಿತ್ಯವನ್ನು ಉಣಬಡಿಸಬೇಕು.
ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಆಯೋಜಿಸಿದ್ದ ಜೋಗಿ ಅವರ ‘ಪುಚ್ಚೆ’ ಕಾದಂಬರಿ ಬಿಡುಗಡೆ ಸಮಾರಂಭ.
ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ‘ಕನ್ನಡ ಭಾಷೆಯಲ್ಲಿರುವ ಸಹಜ ಅಲಂಕಾರವನ್ನು ಆಕರ್ಷಕವಾಗಿ ಜನರಿಗೆ ತಲುಪಿಸಿದಾಗ ಕನ್ನಡದ ಬೆಳವಣಿಗೆ ಸಾಧ್ಯ. ಲಂಕೇಶ್ ಅವರ ನಾಟಕ ಗದ್ಯ, ರವಿ ಬೆಳಗೆರೆ ಅವರ ಕನ್ನಡ ಸಾಹಿತ್ಯ, ಶಿವರಾಮ ಕಾರಂತರ ವಸ್ತು ವಿಷಯ, ಗಿರೀಶ ಕಾರ್ನಾಡರ ನಾಟಕದಂತೆ ಕನ್ನಡಿಗರಿಗೆ ಸಾಹಿತ್ಯವನ್ನು ಉಣಬಡಿಸಬೇಕು. ಈ ನಿಟ್ಟಿನಲ್ಲಿ ನವರಸಗಳನ್ನು ಎರಕಹೊಯ್ದು ಬರೆಯುವವರಲ್ಲಿ ಅಗ್ರಿಗರಾಗಿ ಜೋಗಿ ಅವರು ನಿಲ್ಲುತ್ತಾರೆ’ ಎಂದು ನಿರ್ದೇಶಕ ಟಿ. ಎನ್. ಸೀತಾರಾಂ ಅವರು ಅಭಿಪ್ರಾಯಿಸಿದರು.
ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಜೋಗಿ ಅವರ ‘ಪುಚ್ಚೆ’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಅವರು ಈ ಮಾತನ್ನು ಹೇಳಿದರು.
ಬೆಂಗಳೂರಿಗೆ ವಲಸಿಗರಾಗಿ ಬರುವ ಸಾವಿರಾರು ಜನರಲ್ಲಿ ಇಲ್ಲಿನ ಬಗ್ಗೆ ಅನೇಕ ಕಲ್ಪನೆಗಳಿದ್ದು ನೀವು ನಿಮ್ಮ ಕಾದಂಬರಿಯಲ್ಲಿ ಅಭಿವ್ಯಕ್ತಿ ಪಡಿಸಿರುವ ಬೆಂಗಳೂರು ಯಾವ ಸಮಾಕಾಲೀನದ್ದು? ಎಂಬ ಮೇಘನಾ ಸುಧೀಂದ್ರ ಅವರ ಪ್ರಶ್ನೆಗೆ ಉತ್ತರಿಸುತ್ತಾ ಕೃತಿಕಾರ ಜೋಗಿ ಅವರು “ಮೂಲ ಸ್ಥಳದಲ್ಲಿ ಹೇಗಾದರು ಬದುಕುವ ಭರವಸೆ ಇರುತ್ತದೆ. ಇಂತಹ ತಮ್ಮೂರು ಬಹಳ ಸುರಕ್ಷಿತ ಭಾವದಲ್ಲಿ ಇರುವವರು ನಗರಕ್ಕೆ ವಲಸೆ ಬಂದಾಗ ಹಲವಾರು ಸವಾಲುಗಳು ಎದುರಿಸಬೇಕಾತ್ತದೆ. ಈ ಕಾರಣದಿಂದ ಮೂಲ ನಿವಾಸಿಗಳಿಗಿಂತ ವಲಸಿಗರು ಹೆಚ್ಚಿಗೆ ಶ್ರಮ ಜೀವಿಗಳಾಗುತ್ತಾರೆ. ಅಂತಹ ಶ್ರಮಜೀವನದ, ನನ್ನ ಸಮಕಾಲೀನ ಬೆಂಗಳೂರನ್ನು ಕೃತಿಯಲ್ಲಿ ಅನಾವರಣಗೊಳಿಸಿದ್ದೇನೆ” ಎಂದು ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.
ಪತ್ರಕರ್ತ,ಲೇಖಕ ರವಿ ಬೆಳಗೆರೆ ಅವರ ನೆನಪುಗಳನ್ನು ಮೆಲುಕು ಹಾಕುವ ಮೂಲಕ ನಮನ ಸಲ್ಲಿಸಲಾಯಿತು.
ಪ್ರಿಯಾ ಕೆರ್ವಾಶೆ ಅವರು ಕಾದಂಬರಿಯ ಆಯ್ದ ಭಾಗವನ್ನು ಭಾವಪೂರ್ಣವಾಗಿ ಓದಿದರು.
ರಾಜೇಶ್ ಶೆಟ್ಟಿ, ಮೇಘನಾ ಸುಧೀಂದ್ರ ಮುಂತಾದ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.